ಕಣ್ಣು ಗುಡ್ಡೆ ಕಿತ್ತು ಬಂದರೂ..!! ಕರಡಿ ಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡ ವೃದ್ಧ... !!!
ಉತ್ತರಕನ್ನಡ: 72 ವರ್ಷದ ವ್ಯಕ್ತಿಯೊಬ್ಬರು ಕರಡಿ ದಾಳಿಯಿಂದ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯ್ಡಾ ತಾಲ್ಲೂಕಿನ ಜಗಲ್ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ ನಡೆದಿದೆ.
ಘಟನೆಯೂ ಮಧ್ಯಾಹ್ನ 3:30ರ ಸುಮಾರಿಗೆ ಸಂಭವಿಸಿದ್ದು, ಕರಡಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ವಿಠ್ಠಲ್ ಸಲಾಕೆ(720 ಎಂದು ಗುರುತಿಸಲಾಗಿದ್ದು, ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಘಟನೆ ಸಂಭವಿಸಿದೆ.
ಹೋರಾಡಿ ಜೀವ ಉಳಿಸಿಕೊಂಡ ವ್ಯಕ್ತಿ
ಮಾಲೋರ್ಗಿ ಗ್ರಾಮದ ನಿವಾಸಿಯಾದ ವಿಠ್ಠಲ್ ಕರಡಿಯೊಂದಿಗೆ ಸುಮಾರು 20 ನಿಮಿಷಗಳ ಕಾಲ ಕಾದಾಡಿ ಜೀವವನ್ನು ಉಳಿಸಿಕೊಂಡಿದ್ಧಾರೆ. ದಾಳಿ ವೇಳೆ ಕರಡಿಯೂ ಅವರ ಒಂದು ಕಣ್ಣನ್ನು ಕಿತ್ತು ಹಾಕಿದ್ದು, ಮತ್ತೊಂದು ಕಣ್ಣನ್ನು ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ವೇಳೆ ಗಾಯಾಳು ಜೋರಾಗಿ ಕೂಗಾಡಿದ್ದರ ಪರಿಣಾಮ ಕರಡಿ ಗಾಬರಿಯಿಂದ ಕಾಡಿನೊಳಗೆ ಓಡಿ ಹೋಗಿದೆ.
ಕರಡಿ ದಾಳಿಯಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವೃದ್ದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದ ತಮ್ಮ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗಿದ್ಧಾರೆ. ರಕ್ತ ಮಡುವಿನಲ್ಲಿದ್ದ ಅವರನ್ನು ಕೂಡಲೇ ರಾಮನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಅವರನ್ನು ಬೆಳಗಾವಿಗೆ ಶಿಫ್ಟ್ ಮಾಡಿದ್ಧಾರೆ.
ಗಾಯಗೊಂಡಿರುವ ವಿಠ್ಠಲ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿರುವ ಕಾರಣ ಮುಂದಿನ ಎರಡ್ಮೂರು ದಿನಗಳಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ಧಾರೆ.