ತಾನೇ ತಂದ ಮಚ್ಚಿನಿಂದ..!!ಮಂಡ್ಯದಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ...!!
ಮಂಡ್ಯ: ರೌಡಿಶೀಟರ್ ಒಬ್ಬನನ್ನು ಸ್ನೇಹಿತರೆ ಕತ್ತು ಕತ್ತರಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದವರನ್ನು ಸುಧೀರ್(35) ಎಂದು ಗುರುತಿಸಲಾಗಿದ್ದು, ಪಾರ್ಟಿ ಮಾಡುವ ವೇಳೆ ವಿಚಾರ ಒಂದಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ತಾನೇ ತಂದ ಮಚ್ಚಿನಿಂದ ಕೊಲೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಣ ತಾಲ್ಲೂಕಿನ ಹುಲಿಕೆರೆ ನಿವಾಸಿಯಾದ ಸುಧೀರ್ ತನ್ನ ಸ್ನೇಹಿತ ಪೂರ್ಣಚಂದ್ರ ಸೇರಿದಂತೆ ಇನ್ನಿತರ ಜೊತೆ ಗ್ರಾಮದ ಟೀ ಅಂಗಡಿ ಮುಂಭಾಗ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಈ ವೇಳೆ ವಿಚಾರ ಒಂದಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸುಧೀರ್ ತನ್ನ ಮನೆಗೆ ತೆರಳಿ ಮಚ್ಚನ್ನು ತಂದಿದ್ದಾನೆ.
ಈ ವೇಳೆ ಪೂರ್ಣಚಂದ್ರ ಹಾಗೂ ಇನ್ನಿತರರು ಸುಧೀರ್ ಬಳಿ ಇದ್ದ ಮಚ್ಚನನ್ನು ಕಿತ್ತುಕೊಂಡು ಸುಮ್ಮನಾಗುವಂತೆ ಹೇಳಿದ್ದರು. ಬಳಿಕ ಪಾರ್ಟಿಯಿಂದ ಎದ್ದು ಬಂದ ಸುಧೀರ್ನನ್ನು ಹಿಂಬಾಲಿಸಿ ಪೂರ್ಣಚಂದ್ರ ಹಾಗೂ ಸ್ನೇಹಿತರು ಆತನ ಕತ್ತನ್ನು ಕತ್ತರಿಸಿ ಪರಾರಿಯಾಗಿದ್ಧಾರೆ. ಗ್ರಾಮದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸತ್ತು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.
ಸ್ಥಳಕ್ಕೆ ಭೇಟಿ ನೀಡಿದ ಕೆಆರ್ಎಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಧೀರ್ ಹಾಗೂ ಪೂರ್ಣಚಂದ್ರನ ನಡುವೆ ಹಳೇ ದ್ವೇಷವಿದ್ದ ಕಾರಣ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.