ತೂಕದಲ್ಲಿ ಮೋಸ ಮಾಡುತ್ತಿದ್ದ ಖರೀದಿದಾರನಿಗೆ, ರೈತರು ತರಾಟೆಗೆ ತೆಗೆದುಕೊಂಡರು.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ವಿಠಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಜಿ ಕೊಪ್ಪಲು ಗ್ರಾಮದ ರೈತಹನುಮೇಗೌಡ ಅವರ ಮಗ ರಘು ಎಂಬುವವರ ಒಂದುವರೆ ಎಕ್ಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಮಾರಾಟ ಮಾಡುವ ಸಮಯದಲ್ಲಿ ಖರೀದಿ ಮಾಡುತ್ತಿದ್ದವರು ತೂಕದಲ್ಲಿ ಮೋಸ ಮಾಡುತ್ತಿದ್ದ, ಮೋಸಗಾರನನ್ನು ಗ್ರಾಮಸ್ಥರು ಕಂಡುಹಿಡಿದು ತರಾಟೆಗೆ ತೆಗೆದುಕೊಂಡು, ಇಂತಹ ಮೋಸಗಾರರನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತರಿಗೆ ಮೋಸ ಆಗದಂತೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ನಂತರ ಮಾತನಾಡಿದ ಗ್ರಾಮದ ಮುಖಂಡ ಮಂಜುನಾಥ್ ರೈತರು ಕಷ್ಟಪಟ್ಟು ಬೆಳೆದ ಬೆಲೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ. ಬೆಳೆ ಬೆಳೆಯಲು ಮಾಡಿದ ಸಾಲವನ್ನು ತೀರಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಸರ್ಕಾರಿ ಮಾರುಕಟ್ಟೆಗೆ ಮಾರಾಟ ಮಾಡಿದರೆ ತಕ್ಷಣ ಹಣ ಸಿಗುವುದಿಲ್ಲ ಎಂದು ಗ್ರಾಮಕ್ಕೆ ಬರುವಂತಹ ಖರೀದಿದಾರರಿಗೆ ಮಾರಾಟ ಮಾಡುವವರೇ ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಗ್ರಾಮದ ಯುವ ರೈತ ರಘು ಎಂಬುವವರು ಸುಮಾರು ಒಂದುವರೆ ಎಕ್ಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದು ಇಂದು ಮಾರಾಟ ಮಾಡುತ್ತಿದ್ದರು. ಇದನ್ನು ಕೊಳ್ಳಲು ಬಂದಿದ್ದಂತಹ ಕೆ.ಆರ್.ನಗರ ಮೂಲದ ಹಬೀಬ್ ಎಂಬುವವರು ಒಂದು ಚೀಲದಲ್ಲಿ ಸುಮಾರು 5 ಕೆಜಿಯಷ್ಟು ತೂಕವನ್ನು ವ್ಯತ್ಯಾಸ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇಂಥವರಿಗೆ ರೈತರು ಯಾವುದೇ ಬೆಳೆಗಳನ್ನು ಕೊಡದೆ ಸರ್ಕಾರದ ಮಾರುಕಟ್ಟೆಗೆ ಮಾರಾಟ ಮಾಡಬೇಕು. ಮುಂದಿನ ದಿನದಲ್ಲಿ ಇಂತಹ ಮೋಸ ಮಾಡುವ ಖದೀಮರಿಗೆ ಅಧಿಕಾರಿಗಳು ತಕ್ಕ ಪಾಠವನ್ನು ಕಲಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ನಂತರ ಮಾತನಾಡಿದ ರೈತ ರಘು ನಮ್ಮ ಜಮೀನಿನಲ್ಲಿ ಸುಮಾರು 28 ಕ್ವಿಂಟಲ್ ನಷ್ಟು ಮೆಕ್ಕೆಜೋಳ ಬೆಳೆದಿದ್ದು. ಮಾಂಬಹಳ್ಳಿ ಕಾಂತರಾಜ್ ಎಂಬುವವರು ಕೆ ಆರ್ ನಗರ ತಾಲೂಕಿನ ದೊಡ್ಡ ಕೊಪ್ಪಲು ಗ್ರಾಮದ ಹಬೀಬ್ ಎಂಬುವವರನ್ನು ನಮ್ಮ ಜಮೀನಿನ ಬಳಿ ಕರೆದುಕೊಂಡು ಬಂದರು ನಾವು ಅವರಿಗೆ ಮೆಕ್ಕೆಜೋಳವನ್ನು ಮಾರಾಟ ಮಾಡಿ ತೂಕ ಮಾಡುವಂತ ಸಂದರ್ಭದಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಿ ನಮಗೆ ಮೋಸ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಿ ನಮ್ಮ ಗ್ರಾಮದಲ್ಲಿ ಇದ್ದಂತಹ ಸ್ಕೇಲ್ ಒಂದನ್ನು ತರಿಸಿ ತೂಕ ಮಾಡಿಸಿದಾಗ ಸುಮಾರು ಐದು ಕೆಜಿ ವ್ಯತ್ಯಾಸ ಕಂಡು ಬಂತು. ಕೂಡಲೇ ಎಲ್ಲರೂ ಅವರನ್ನು ಪ್ರಶ್ನೆ ಮಾಡಿದಾಗ ನಿಮ್ಮ ಸ್ಕೇಲಿನ ತೂಕದಂತೆಯೇ ಪಡೆಯುತ್ತೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದುದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಇಂತಹ ಮೋಸಗಾರರಿಗೆ ಮಾರಾಟ ಮಾಡಿ ಮೋಸ ಹೋಗಬೇಡಿ ಎಂದು ರೈತರಿಗೆ ಮನವಿ ಮಾಡಿ ಅಧಿಕಾರಿಗಳು ಇಂತಹವರನ್ನು ಹಿಡಿದು ರೈತರಿಗೆ ಮೋಸವಾಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್, ಬುಂಡೆಗೌಡ, ಜಯಣ್ಣ, ಹನುಮೇಗೌಡ, ಯೋಗಣ್ಣ, ಪಟೇಲ್ ದೇವೇಗೌಡ ಸೇರಿದಂತೆ ಉಪಸ್ಥಿತರಿದ್ದರು..